ಶ್ರೀ ಕೆ.ಎಸ್.ನರಸಿಂಹಸ್ವಾಮಿ ಕನ್ನಡದ ಅದ್ವಿತೀಯ ಪ್ರೇಮಕವಿ. ಅವರ ಮೈಸೂರ ಮಲ್ಲಿಗೆಯಂತೂ ಕನ್ನಡ ಪ್ರೇಮಕಾವ್ಯದ ಜಯಭೇರಿ. ಇದನ್ನು ಬರೆದು ಬೆಳಕು ಹರಿಯುವುದರೊಳಗೆ ಈ ಕವಿ ನಾಡಿನ ತುಂಬಾ ಹೆಸರಾಗಿ ಬಿಟ್ಟರು. ಪ್ರೇಮಜೀವನದ ಸಾರ್ಥಕ ಮುಹೂರ್ತಗಳ ಸುಂದರ ಚಿತ್ರಗಳನ್ನು ನೀಡಿ ಕನ್ನಡ ಸಾಹಿತ್ಯ/ಕಾವ್ಯ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಬಿಟ್ಟರು. ಜೀವ ಜಾಲಕ್ಕೆಲ್ಲ ಮರುಳು ಹಿಡಿಸುವ ಪ್ರೀತಿಯ ಮಾಯೆಯೇ ಇಲ್ಲಿನ ಕವಿತೆಗಳ ವಸ್ತು. ಹಾಗೆಂದೇ ಇವು ಹೊಸ ದಂಪತಿಗಳ ಪಿಸು-ಮಾತಿನಷ್ಟೇ ಸವಿಯಾಗಿವೆ. 'ಮೈಸೂರ ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ, ಇದು ಈ ಮಣ್ಣು ನೆಲದಿಂದ ಬರಲು ಸಾಧ್ಯವೇ?' ಎಂದು ವರಕವಿ ಬೇಂದ್ರೆಯಂತವರೇ ಆಶ್ಛರ್ಯಪಟ್ಟಿದ್ದಾರೆ; 'ಕಸ್ತೂರಿಯ ನೆಲದಲ್ಲಿ ಕಾಮನಬಿಲ್ಲನು ಬಿತ್ತಿ ಬೆಳೆದ ಹೂದೋಟ ಇದು' ಎಂದು ಪ್ರಾಜ್ಞರು ಪ್ರಶಂಸಿದ್ದಾರೆ. ಬಳೆಗಾರ ಚೆನ್ನಯ್ಯ , ಒಂದಿರುಳು ಕನಸಿನಲಿ , ರಾಯರು ಬಂದರು ಮಾವನ ಮನೆಗೆ ಕಾವ್ಯ ರಸಿಕರ ಹೃದಯಕ್ಕೇ ಲಗ್ಗೆಹಾಕಿದ ಕವಿತೆಗಳು; ಈ ಕವಿ ಮೊದಲ ಇನ್ನಿಂಗ್ಸ್ ನಲ್ಲಿಯೇ ಹೊಡೆದ ಸಿಕ್ಸರ್ಗಳು. ಎಷ್ಟೋ ಸಾರಿ ಪುಸ್ತಕ ನೋಡದೆ ಕವಿ ಯಾರೆಂದು ತಿಳಿಯದೆ ಬಾಯಿಂದ ಬಾಯಿಗೆ ಇವು ಹರಿದು ಬಂದದ್ದೂ ಇದೆ. ಈ ಕವಿತೆಗಳಲ್ಲಿ ಕಾಣಿಸಿಕೊಂಡಿರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರಾಗಿದ್ದಾರೆ, ನಾಡಿನ ಜನಕ್ಕೆ ತಮ್ಮ ಯೌವನದ ಪ್ರತಿನಿಧಿಗಳಾಗಿದ್ದಾರೆ. ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು ನಮ್ಮೂರು ಹೊನ್ನೂರು ನಿಮ್ಮೂರು ನವಿಲೂರು ಚೆಂದ ನಿನಗಾವುದೆಂದು ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಎಂದೆನ್ನ ಕೇಳಲೇಕೆ ಎನ್ನರಸ ಸುಮ್ಮನಿರಿ ಎಂದಳಾಕೆ ತೌರೂರ ದಾರಿಯಲಿ ತೆಂಗುಗಳು ತಲೆದೂಗಿ ಬಾಳೆಗಳು ತೋಳ ಬೀಸಿ ಮಲ್ಲಿಗೆಯ ಮೊಗ್ಗುಗಳು ಮುಳ್ಳ ಬೇಲಿಯ ವರಿಸಿ ಬಳುಕುತಿರೆ ಕೆಂಪ ಸೂಸಿ ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು ನಿಮ್ಮೂರ ಸಂತೆಗಾಗಿ ನವಿಲೂರಿಗಿಂತಲು ಹೊನ್ನೂರೆ ಸುಖವೆಂದು ನಿಲ್ಲಿಸಿತು ಪ್ರೇಮ ಕೂಗಿ ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ ಓಡಿದುದು ದಾರಿ ಬೇಗ ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು ನಿಮ್ಮೂರು ಸೇರಿದಾಗ ಊರ ಬೇಲಿಗೆ ಬಂದು ನೀವು ನಮ್ಮನು ಕಂಡು ಕುಶಲವನು ಕೇಳಿದಾಗ ತುಟಿಯಲೇನೋ ನಿಂದು ಕಣ್ಣಲೇನೋ ಬಂದು ಕೆನ್ನೆ ಕೆಂಪಾದುದಾಗ